- This event has passed.
ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ
April 10 @ 10:00 am - April 19 @ 12:30 pm
ಹೆಚ್. ಎಸ್. ಆರ್. ಬಡಾವಣೆಯ ಬ್ರಾಹ್ಮಣ ಸಂಘದ ವತಿಯಿಂದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಶಕುಂತಲಾ ದೇವಿ ಪ್ರಿ ಯೂನಿವರ್ಸಿಟಿ ಕಾಲೇಜು, ಹೆಚ್ ಎಸ್ ಆರ್ ಬಡಾವಣೆಯ, ಸೆಕ್ಟರ್ 5 ರಲ್ಲಿ, ದಿನಾಂಕ 10/04/2026 ರಿಂದ 19/04/2026 ರವರೆಗೆ ಬೆಳ್ಳಿಗ್ಗೆ 10.00 ರಿಂದ 12.30 ರ ತನಕ ಹಮ್ಮಿಕೊಂಡಿದ್ದರು. ಇದರ ಮುಖ್ಯ ಉದ್ದೇಶ ಮಕ್ಕಳಿಗೆ ನಮ್ಮ ಸನಾತನ ಧರ್ಮ, ಸಂಸ್ಕೃತಿ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಕೆಲವು ದೇಶಿಯ ಆಟಗಳು ಮತ್ತು ಚಟುವಟಿಕೆಗಳಲ್ಲಿ ಮಕ್ಕಳನ್ನು ಪಾಲ್ಗೊಳಿಸಲಾಯಿತು. ಇದರ ಮುಂದಾಳ್ವಿಕೆಯನ್ನು ನಮ್ಮ ಅದ್ಯಕ್ಷರಾದ ಶ್ರೀ ಎ. ರಮೇಶ್ ಅವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಎ. ಆರ್. ನರಸಿಂಹಮೂರ್ತಿ ಅವರು ವಹಿಸಿಕೊಂಡಿದ್ದರು. ಇದಕ್ಕೆ ಪೂರ್ವ ಸಿದ್ಧತೆ ಕಾರ್ಯಗಳನ್ನು ಅದ್ಯಕ್ಷರಾದ ಶ್ರೀ ಎ. ರಮೇಶ್ ಅವರು, ಶ್ರೀಮತಿ ಕಲ್ಯಾಣಿ ರಮೇಶ್, ಶ್ರೀಮತಿ ಎ. ಸಿಂಧೂ ಪ್ರಿಯದರ್ಶಿನಿ, ಶ್ರೀಮತಿ ದಿವ್ಯ ವಿನಯ್, ಶ್ರೀಮತಿ ಬ್ರಾಹ್ಮೀ ನಟೇಶ್ ಹಾಗೂ ಶ್ರೀಮತಿ ಕುಸುಮ ಅವರ ಸಹಕಾರದಿಂದ ಸುಸೂತ್ರವಾಗಿ ನಡೆಸಿದರು. ನಮಗೆ ಬೇಸಿಗೆ ಶಿಬಿರಕ್ಕೆ ಸ್ಥಳಾವಕಾಶವನ್ನು ಮಾಡಿಕೊಟ್ಟ ಶಕುಂತಲಾ ದೇವಿ ಕಾಲೇಜು ಪ್ರಾಂಶುಪಾಲರಿಂದ ಮತ್ತು ಶ್ರೀ ವಿನಾಯಕ ಪ್ರತಿಷ್ಠಾನದ ಕಾರ್ಯಕಾರಿಣಿ ಸದ್ಯಸರಿಂದ ನಾವು ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಅವಕಾಶವಾಯಿತು. ನಮ್ಮ ಬ್ರಾಹ್ಮಣ ಸಂಘದ ಎಲ್ಲಾ ಕಾರ್ಯಕಾರಿಣಿ ಸದಸ್ಯರ ಹಾಗೂ ಎಸ್.ಎಲ್.ಎನ್ ವೇದಬಂಧುಗಳ ಸಹಕಾರದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂತು.
ಸುಮಾರು 75 ಮಕ್ಕಳು ಈ ಶಿಬಿರಕ್ಕೆ ದಾಖಲಾಗಿದ್ದರು. ಸರಾಸರಿ 70 ಮಕ್ಕಳು ಈ ಶಿಬಿರದ ಉಪಯೋಗ ಪಡೆದರು. ನಮ್ಮ ಶಿಬಿರವು ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಸಂಘದ ಅದ್ಯಕ್ಷರಾದ ಶ್ರೀ ಎ. ರಮೇಶ್ ರವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಎ. ಆರ್. ನರಸಿಂಹಮೂರ್ತಿ ರವರು, ಹಾಗೂ ಶಕುಂತಲಾ ದೇವಿ ಪ್ರಿ ಯೂನಿವರ್ಸಿಟಿ ಕಾಲೇಜು, ಪ್ರಾಂಶುಪಾಲರಾದ ಶ್ರೀ ರಾಘವೇಂದ್ರ ರಾವ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಪ್ರತಿದಿನವೂ ನಮ್ಮ ಶಿಬಿರವು ಮಕ್ಕಳಿಗೆ ಶ್ಲೋಕವನ್ನು ಹೇಳಿಕೊಡುವುದರ ಮೂಲಕ ಪ್ರಾರಂಭವಾಗುತ್ತಿತ್ತು. ನಂತರ ನಮ್ಮ ಆಯೋಜಕರಿಂದ ಎರಡು ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತಿತ್ತು ಮತ್ತು ಅರ್ಧ ಗಂಟೆ ಆಟಕ್ಕಾಗಿ ಮೀಸಲಿಡಲಾಗುತ್ತಿತ್ತು, ಕೊನೆಯ ಅರ್ಧ ಗಂಟೆ ಮಕ್ಕಳಿಗೆ ಹಾಡುಗಳು ಮತ್ತು ನೃತ್ಯಗಳ ಅಭ್ಯಾಸಕ್ಕಾಗಿ ಮೀಸಲಿಡಲಾಗುತ್ತಿತ್ತು. ಪ್ರತಿದಿನ ಮಕ್ಕಳು ಸಾತ್ವಿಕ ಪ್ರಸಾದವನ್ನು ಸ್ವೀಕರಿಸಿ ಸಂತೋಷದಿಂದ ಮನೆಗೆ ತೆರಳುತ್ತಿದ್ದರು.
ನಮ್ಮ ನುರಿತ ಆಯೋಜಕರಿಂದ ನಡೆಸಿದ ಚಟುವಟಿಕೆಗಳು ಹೀಗಿವೆ. ಬುದ್ಧಿ ಚುರುಕುಗೊಳಿಸುವ ಸುಡುಕೊ, ವೇದಿಕ್ ಗಣಿತ, ಬ್ರೈನ್ ಗೇಮ್ಸ್, ವರ್ಲ್ಡ್ ಬಿಲ್ಡಿಂಗ್ ಹಾಗೂ ಮೆಮೊರಿ ಟೆಸ್ಟ್ ಗಳನ್ನು ಮಕ್ಕಳಿಗೆ ಮಾಡಿಸಿದ್ದೆವು. ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ರಂಗೋಲಿ, ತೋರಣ ಕಟ್ಟುವುದನ್ನು ಮಕ್ಕಳಿಂದ ಮಾಡಿಸಿದೆವು. ಮಕ್ಕಳಲ್ಲಿ ಭಕ್ತಿಭಾವ ಬೆಳೆಸಲು ದೇವರನಾಮ ದೇಶಭಕ್ತಿ ಗೀತೆಗಳನ್ನು ಹಾಡಿಸಲಾಯಿತು. ಮಕ್ಕಳಿಗೆ ಜೀವನದ ಮೌಲ್ಯಗಳನ್ನು ತಿಳಿಸುವ ನೀತಿ ಕಥೆಗಳನ್ನು ಹೇಳಲಾಯಿತು ಹಾಗೂ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಾಮಗಳ ತರಬೇತಿಯನ್ನು ನೀಡಿದೆವು. ಮಕ್ಕಳನ್ನು ಉಲ್ಲಾಸಗೊಳಿಸುವಂತಹ ಚಿತ್ರಕಲೆ, ಕರಕುಶಲ ಕಲೆ, ಆಶು ಭಾಷಣ, ಆಶು ನಟನೆ ಹಾಗೂ ಆಟೋಟಗಳಂತಹ ಚಟುವಟಿಕೆಗಳನ್ನು ಕೈಗೊಂಡಿದ್ದೆವು. ಇದಲ್ಲದೆ ಮಕ್ಕಳಿಗೆ ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಲಾಯಿತು. ನಮ್ಮ ಆಯೋಜಕರಾದ ಶ್ರೀಮತಿ ಕಲ್ಯಾಣಿ ರಮೇಶ್, ಶ್ರೀ ಎ. ರಮೇಶ್, ಶ್ರೀಮತಿ ಮೀರ, ಶ್ರೀಮತಿ ಬ್ರಾಹ್ಮಿ, ಶ್ರೀಮತಿ ದಿವ್ಯ ವಿನಯ್, ಶ್ರೀಮತಿ ಉಷಾ ಅಯ್ಯರ್, ಶ್ರೀಮತಿ ಸುಜಾತ, ಶ್ರೀಮತಿ ಪ್ರೇಮ ರೆಡ್ಡಿ, ಶ್ರೀಯುತ ಶ್ರೀಧರ್ ರಾವ್, ಶ್ರೀ ನಟೇಶ, ಶ್ರೀಮತಿ ಮೈತ್ರಿ, ಶ್ರೀಮತಿ ಎ. ಸಿಂಧೂ ಪ್ರಿಯದರ್ಶಿನಿ, ಶ್ರೀಮತಿ ಕುಸುಮ, ಶ್ರೀಮತಿ ರಮ್ಯಾ, ಶ್ರೀಮತಿ ನಾಗಲಕ್ಷ್ಮಿ, ಶ್ರೀಮತಿ ದೀಪ, ಶ್ರೀಮತಿ ಶಾಮಲಾ ಮತ್ತು ಶ್ರೀಮತಿ ಲಲಿತಾ ಇವರುಗಳು ಮೇಲೆ ತಿಳಿಸಿರುವ ಚಟುವಟಿಕೆಗಳನ್ನು ತುಂಬ ಉತ್ಸಾಹದಿಂದ ನಡೆಸಿಕೊಟ್ಟಿರುತ್ತಾರೆ. ವಾಸ್ತವಿಕ ಪ್ರಪಂಚದ ವ್ಯವಹಾರ ಜ್ಞಾನಕ್ಕಾಗಿ ಪೋಸ್ಟಲ್ ಸರ್ವಿಸ್ ಹಾಗೂ ಸೇವಿಂಗ್ಸ್ ಬಗ್ಗೆ ಪೋಸ್ಟ್ ಮಾಸ್ಟರ್ ಅರುಣ್ ಕುಮಾರ್ ಅವರಿಂದ ವಿವರವಾದ ಮಾಹಿತಿಯನ್ನು ತಿಳಿಸಲಾಯಿತು. ಕೈಬರಹ ತಜ್ಞರಾದ ಶಿವಾನಂದ ನಾಯಕ್ ಅವರಿಂದ ಮಕ್ಕಳಿಗೆ ಅಂದವಾದ ಬರವಣಿಗೆಯನ್ನು ಅಭ್ಯಾಸ ಮಾಡುವುದರ ಜೊತೆಗೆ ತರಬೇತಿ ನೀಡಲಾಯಿತು ಪ್ರಸಿದ್ಧ ಟಿವಿ ಕಲಾವಿದರುಗಳಾದ ಪಾಪ ಪಾಂಡು ಖ್ಯಾತಿಯ ಸೌರಭ್ ಕುಲಕರ್ಣಿ ಹಾಗೂ ಅಂಜನ್ ಭಾರದ್ವಾಜ್ ಅವರಿಂದ ಮಕ್ಕಳಿಗೆ ನಟನೆಯ ತರಬೇತಿಯನ್ನು ನೀಡಿ ನಾಟಕ ಅಭ್ಯಾಸ ಮಾಡಿಸಲಾಯಿತು. ನುರಿತ ವೈದ್ಯರಾದ ಡಾ.ಅಮರನಾಥ್ ಮತ್ತು ಡಾ.ಲಕ್ಷ್ಮಿ ಅವರಿಂದ ಆರೋಗ್ಯದ ಬಗ್ಗೆ ಸಲಹೆ ಎಚ್ಚರಿಕೆಗಳನ್ನು ನೀಡಲಾಯಿತು. ಸತ್ಯಕಲಾ ಅವರಿಂದ ವೈಜ್ನ್ಯಾನಿಕ ಚಟುವಟಿಕೆಯಾಗಿ ಅರಿಶಿನ ಬಳಸಿ ಚಿತ್ರಕಲೆ ಮಾಡಿಸಲಾಯಿತು. ನೃತ್ಯದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ನೃತ್ಯ ಸಂಯೋಜಕರಾದ ಲಕ್ಷ್ಮಿಮತ್ತು ನವೀನ್ ಅವರಿಂದ ನೃತ್ಯ ಅಭ್ಯಾಸ ಮಾಡಿಸಲಾಯಿತು. ಶ್ರೀಯುತ ಅನಂತ್, ಶ್ರೀಮತಿ ಸಂಧ್ಯಾ ಚಂದ್ರಶೇಖರ್ ಮತ್ತು ಶ್ರೀ ಸುಬ್ಬ್ರಮಣ್ಯ ರವರು ಶಿಬಿರದ ಪ್ರತಿಯೊಂದು ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮಕ್ಕಳ್ಳು ಪ್ರತಿ ದಿನ ಭಾಗವಹಿಸಿ ಎಲ್ಲ ಚಟುವಟಿಕೆಗಳನ್ನು ಲವಲವಿಕೆಯಿಂದ ಕಲಿತರು ಮತ್ತು ಎಲ್ಲ ಕಲಿಕೆಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು. ಇದಕ್ಕೆ ಪೋಷಕರು ಕೂಡ ಸಕ್ರಿಯವಾದ ಬೆಂಬಲವನ್ನು ನೀಡಿದರು. ಕೆಲವು ಪೋಷಕರು ಹಾಗೂ ನಮ್ಮ ಸಂಘದ ಕೆಲವು ಸದಸ್ಯರು ಪ್ರತಿದಿನ ಕೊಡುವ ಪ್ರಸಾದ ಮತ್ತು ಬಹುಮಾನಗಳಿಗೆ ಉದಾರ ಮನಸ್ಸಿನಿಂದ ದೇಣಿಗೆ ನೀಡಿದರು.
ಕೊನೆಯ ದಿನದಂದು ನಮ್ಮ ಶಿಬಿರದ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿದೆವು. ಈ ಕಾರ್ಯಕ್ರಮದಲ್ಲಿ ನಮ್ಮ ಕ್ಷೇತ್ರದ ಶಾಸಕರಾದ ಶ್ರೀ ಸತೀಶ್ ರೆಡ್ಡಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ವಿನಾಯಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ್ ದೀಕ್ಷಿತ್ ರವರು ಹಾಗೂ ಕಾರ್ಯದರ್ಶಿಗಳಾದ ಶ್ರೀ ಗುರುರಾಜರವರು ಮತ್ತು ನಮ್ಮ ಸಂಘದ ಅಧ್ಯಕ್ಷರಾದ ಶ್ರೀ ಎ. ರಮೇಶ್ ಅವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಎ. ಆರ್. ನರಸಿಂಹಮೂರ್ತಿ ಅವರು ಹಾಗೂ ಉಪಾಧ್ಯಕ್ಷರಾದ ನರಸಿಂಹಯ್ಯ ಅವರು ಮಕ್ಕಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಕೆಲವು ಪೋಷಕರು ಹಾಗೂ ಸಂಘದ ಸದಸ್ಯರು ಕೂಡ ಪಾಲ್ಗೊಂಡಿದ್ದರು. ಮಕ್ಕಳು ನಮ್ಮ ಶಿಬಿರದಲ್ಲಿ ಕಲಿತಂತಹ ಶ್ಲೋಕಗಳನ್ನು ಗೀತೆಗಳನ್ನು ಹಾಗೂ ನೃತ್ಯಗಳನ್ನು ಪ್ರೇಕ್ಷಕರ ಮನಮಿಡಿಯುವಂತೆ ಅತ್ಯುತ್ತಮವಾಗಿ ಪ್ರದರ್ಶಿಸಿದರು. ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರ್ಟಿಫಿಕೇಟ್ ಹಾಗೂ ಲಂಚ್ ಬಾಕ್ಸ್ ಗಳನ್ನು ನೀಡಲಾಗಿತ್ತು. ಪ್ರತಿದಿನ ಆಡಿಸಿದಂತಹ ಆಟಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನಗಳೊಂದಿಗೆ ಸರ್ಟಿಪಿಕೇಟ್ ಗಳನ್ನು ನೀಡಲಾಗಿತ್ತು. ಎಲ್ಲಾ ಆಯೋಜಕರಿಗೆ ಮತ್ತು ಸ್ವಯಂ ಸೇವಾಕರ್ತರಿಗೆ ವಾಟರ್ ಬಾಟಲಿ ಗಳನ್ನೂ ವಿತರಿಸಲಾಯಿತು.
ಮಕ್ಕಳ ಬೇಸಿಗೆ ಶಿಬಿರದ ಸಂಚಾಲಕರು:
ಶ್ರೀಮತಿ ಎ. ಸಿಂಧೂ ಪ್ರಿಯದರ್ಶಿನಿ
ಶ್ರೀಮತಿ ಬ್ರಾಹ್ಮೀ ನಟೇಶ್
******
